ಮೈಸೂರು: ನಗರದಲ್ಲಿ ಕ್ಯಾಸಿನೋ ಸಂಸ್ಕೃತಿ ಹುಟ್ಟಿಗೆ ಮಾಜಿ ಸಚಿವ ಅಶ್ವಥ್ ನಾರಾಯಣ ಕಾರಣ ಎಂದು ಚಾಮರಾಜ ಕ್ಷೇತ್ರದಲ್ಲಿ ನೂತನ ಶಾಸಕ ಕೆ.ಹರೀಶ್ ಗೌಡ ಆರೋಪಿಸಿದರು.
ಜಿಲ್ಲಾ ಪತ್ರಕರ್ತರ ಭವನದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಹುಕ್ಕ ಮತ್ತು ಕ್ಯಾಶಿನೊ ಕೇಂದ್ರ ಬಂದ್ ಆಗಬೇಕು ಎಂಬ ಕೂಗು ಕೇಳಿಬಂದಾಗ ಎರಡು ವರ್ಷಗಳ ಹಿಂದೆ ಅಶ್ವಥ್ ನಾರಾಯಣ ಅವರು ನನಗೆ ದೂರವಾಣಿ ಮೂಲಕ ಕರೆ ಮಾಡಿ ಮೈಸೂರಿನಲ್ಲಿ ನನ್ನ ಸ್ನೇಹಿತರೊಬ್ಬರು ಕ್ಯಾಸಿನೋ ನಡೆಸಲಿದ್ದಾರೆ ಅವರಿಗೆ ಯಾವುದೇ ತೊಂದರೆ ಕೊಡಬೇಡಿ ಎಂದಿದ್ದರು. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದೆ ಎಂದು ಹೇಳಿದರು.
ಚುನಾವಣೆಯಲ್ಕಿ ಹುಕ್ಕಾ ಬಾರ್ಗಳ ಮಾಲೀಕರಿಂದ ತಾವು ಗೆದ್ದಿದ್ದಾರೆ ಎಂಬ ಮಾಜಿ ಶಾಸಕ ಎಲ್. ನಾಗೇಂದ್ರ ಅವರ ಆರೋಪಕ್ಕೆ ನೂತನ ಶಾಸಕ ಹರೀಶ್ಗೌಡ ತಿರುಗೇಟು ನೀಡಿದರು.
ವಾಸ್ತವವಾಗಿ ಈ ಹಿಂದೆಯೂ ತಾವು ಕ್ಯಾಸಿನೊ ಮೊದಲಾದ ಜೂಜಾಟ ಕುರಿತಂತೆ ಅಂದಿನ ಪೊಲೀಸ್ ಆಯುಕ್ತರೊಡನೆ ಮಾತುಕತೆ ನಡೆಸಿ ಅವುಗಳನ್ನು ಮುಚ್ಚಿಸಲು ಹೋರಾಟ ಮಾಡಿದ್ದೇನೆ. ವಾಸ್ತವವಾಗಿ ಕಳೆದ ಐದು ವರ್ಷ ಯಾರು ಶಾಸಕರಾಗಿದ್ದರು, ಯಾರ ಸರ್ಕಾರ ಇತ್ತು? ಆ ವೇಳೆ ಏಕೆ ಹುಕ್ಕಾಬಾರ್ಗಳನ್ನು ಮುಚ್ಚಿಸಲಿಲ್ಲ ಎಂಬ ಬಗ್ಗೆ ಮಾಜಿ ಶಾಸಕರು ಉತ್ತರ ನೀಡಲಿ ಎಂದು ತಾಕೀತು ಮಾಡಿದರು.
ಬಳಿಕ, ಚಾಮರಾಜ ಕ್ಷೇತ್ರದಲ್ಲಿ ಕಳೆದ ೨೫ ವರ್ಷಗಳಿಂದ ಸೂರಿಲ್ಲದ ಯಾರಿಗೂ ಸರ್ಕಾರದ ಕಾರ್ಯಕ್ರಮ ಮೂಲಕ ಸೂರು ನೀಡಿಲ್ಲ. ಹೀಗಾಗಿ ಕಳೆದ ೨೦ ವರ್ಷಗಳಿಂದ ಹಣ ಪಾವತಿಸಿ ಕಾಯುತ್ತಿರುವವರಿಗೆ ಆದ್ಯತೆ ನೀಡಿ, ಬಳಿಕ ಇತರರಿಗೂ ಸೂರು ಕಲ್ಪಿಸಲಾಗುವುದು. ಯಾವುದೇ ಒಂದು ಕ್ಷೇತ್ರದ ಅಭಿವೃದ್ಧಿ ಆಗಬೇಕಿದ್ದರೆ ಪಕ್ಷಾತೀತವಾಗಿ ಎಲ್ಲರ ಸಹಕಾರ ಅಗತ್ಯ. ಈ ಹಿಂದೆ ಸಿಎಂ ಆಗಿದ್ದ ವೇಳೆ ಈಗಿನ ನೂತನ ಸಿಎಂ ಸಿದ್ದರಾಮಯ್ಯ ವರು ಸಾವಿರಾರು ಕೋಟಿ ಅನುದಾನ ನೀಡಿ ಕ್ಷೇತ್ರ ಅಭಿವೃದ್ಧಿಗೊಳಿಸಿದ್ದರ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಪುಷ್ಪಲತ ಚಿಕ್ಕಣ್ಣ, ಇನ್ನಿತರರು ಹಾಜರಿದ್ದರು.