ಮೈಸೂರು: ಮಣಿಪುರದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಜನಾಂಗೀಯ ಹತ್ಯೆಗಳು ಮತ್ತು ಗಲಭೆಗಳನ್ನು ಖಂಡಿಸಿ ಎಸ್ ಯು.ಸಿ.ಐ. ಕಮ್ಯುನಿಸ್ಟ್ ಪಕ್ಷದ ವತಿಯಿಂದ ನಗರದ ನೆಹರು ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಕಳೆದ 2 ತಿಂಗಳುಗಳಿಂದ ಮಣಿಪುರದಲ್ಲಿ ಆರಂಭವಾದ ಕೋಮುವಾದಿ ಹತ್ಯೆಗಳು ಮತ್ತು ಗಲಭೆಗಳು ಈಗಲೂ ಮುಂದುವರೆಯುತ್ತಿದೆ. ಇದರ ಪರಿಣಾಮವಾಗಿ ಅಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ, ನೂರಾರು ಜನ ಗಲಭೆಗಳಲ್ಲಿ ಪ್ರಾಣ ಕಳೆದುಕೊಂಡರೆ, ಸಾವಿರಾರು ಜನರು ಎಲ್ಲವನ್ನೂ ಕಳೆದುಕೊಂಡು ಸ್ಥಳಾಂತರಗೊಂಡಿದ್ದಾರೆ. ವಾಸ್ತವದಲ್ಲಿ ಮಣಿಪುರ ಹೊತ್ತಿ ಉರಿಯುತ್ತಿದೆ. ಕೇಂದ್ರ ಬಿಜೆಪಿ ಹಾಗೂ ಮಣಿಪುರ ರಾಜ್ಯ ಬಿಜೆಪಿ ಸರ್ಕಾರ ಆನುಸರಿಸುತ್ತಿರುವ ತಾರತಮ್ಯ ನೀತಿಗಳಿಂದ, ಮೀಸಲಾತಿ ಹಾಗೂ ಅರಣ್ಯಗಳ ಮೇಲಿನ ಹಕ್ಕುಗಳ ಕುರಿತು ಒಡೆದು ಆಳುವ ರೀತಿಯಲ್ಲಿ ಬಿಜೆಪಿ ಸರ್ಕಾರವು ಕೈಗೊಂಡ ತಪ್ಪು ನೀತಿಗಳಿಂದಲೇ ಈ ಹಿಂಸಾಚಾರವು ಉಲ್ಬಣಗೊಳ್ಳುತ್ತಿವೆ ಎಂದು ಪ್ರತಿಭಟನಕಾರರು ಆರೋಪಿಸಿದರು
ಈ ಮಾನವ ಹಾನಿ ಕುರಿತು ಈವರೆವಗೂ ಪ್ರಧಾನಮಂತ್ರಿಗಳು ಈ ಕುರಿತು ಒಂದೇ ಒಂದು ಮಾತು ಸಹ ಆಡಿಲ್ಲದಿರುವುದು ಅತ್ಯಂತ ದುರಾದೃಷ್ಟಕರವಾಗಿದೆ. ಮಣಿಪುರ ಹೊತ್ತಿ ಉರಿಯುತ್ತಿದ್ದಾಗ ಪ್ರಧಾನಿಗಳು ಕರ್ನಾಟಕದ ಚುನಾವಣಾ ರೋಡ್ ಶೋಗಳಲ್ಲಿ, ಇತ್ತೀಚೆಗೆ ಅಮೆರಿಕಾದಲ್ಲಿ ವ್ಯಾಪಾರಿ ಪ್ರವಾಸದಲ್ಲಿ ತೊಡಗಿದ್ದು ಖಂಡನೀಯ ಎಂದರು.
ಮೈತೇಯಿ ಹಾಗೂ ಕುಕಿ ಜನಾಂಗದ ನಡುವೆ ಭಾತೃ ಹಂತಕ ಹಿಂಸಾಚಾರವು ನಡೆಯುತ್ತಿದ್ದು, ಕೇಂದ್ರ ಮತ್ತು ಮಣಿಪುರ ರಾಜ್ಯ ಸರ್ಕಾರದಲ್ಲಿ ಬಿಜೆಪಿ ಪಕ್ಷವೇ ಆಡಳಿತದಲ್ಲಿದ್ದರೂ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ.
ಮಣಿಪುರದಲ್ಲಿ ಶಾಂತಿ ನೆಲೆಸಲು, ಜನಜೀವನ ಮೊದಲಿನ ಸ್ಥಿತಿಗೆ ಬರಲು ಕ್ರಮ ಕೈಗೊಳ್ಳುವ ಬದಲು ಜನರ ಜೀವನದೊಂದಿಗೆ ಆಟವಾಡುವ ಮನಃಸ್ಥಿತಿ ಪ್ರದರ್ಶನ ಮಾಡುತ್ತಿವೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಈ ನಡವಳಿಕೆಯನ್ನು ನಾವು ಅತ್ಯಂತ ಉಗ್ರವಾಗಿ ಖಂಡಿಸುತ್ತೆವೆ. ಸರ್ಕಾರದ ಒಡೆದು ಆಳುವ ನೀತಿಗೆ ದಾಳವಾಗದೆ ಮಣಿಪುರದ ಎರಡೂ ಜನಾಂಗಗಳ ದುಡಿಯುವ ಜನತೆ ತಮ್ಮ ಒಗ್ಗಟ್ಟನ್ನು ಕಾಪಾಡಿಕೊಂಡು, ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಡಲು ಬೇಕಾದ ಐಕ್ಯತೆಯನ್ನು ಎತ್ತಿ ಹಿಡಿಯಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸೆಕ್ರಟೇರಿಯೇಟ್ ಸದಸ್ಯರಾದ ಚಂದ್ರಶೇಖರ್ ಮೇಟಿ, ಜಿಲ್ಲಾ ಸಮಿತಿ ಸದಸ್ಯರಾದ ಸಂಧ್ಯಾ.ಪಿ.ಎಸ್, ಸೀಮಾ ಜಿ.ಎಸ್, ಯಶೋಧರ್, ಹರೀಶ್ ಹಾಗೂ ಪಕ್ಷದ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.