ಮೈಸೂರು: ತಂಬಾಕಿನಲ್ಲಿ 300ಕ್ಕೂ ಹೆಚ್ಚು ವಿಷಕಾರಿ ಅಂಶಗಳಿದ್ದು, ತಂಬಾಕು ಸೇವನೆಯ ಪರಿಣಾಮ ನೇರವಾಗಿ ದೇಹದ ಪ್ರತಿಯೊಂದು ಪ್ರಮುಖ ಅಂಗದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಡಿಆರ್ಎಂ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ಮಂಜುನಾಥ್ ತಿಳಿಸಿದರು.
ನಗರದ ಒಂಟಿಕೊಪ್ಪಲ್ನಲ್ಲಿರುವ ಡಿಆರ್ಎಂ ಆಸ್ಪತ್ರೆ, ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 50 ಮಂದಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಸ್ವಯಂ ಪ್ರೇರಿತರಕ್ತದಾನ ಮಾಡಿದರು
ಆಸ್ಪತ್ರೆಯ ನಿರ್ದೇಶಕರಾದ ಡಾಕ್ಟರ್ ಮಂಜುನಾಥ್ ಸ್ವಯಂ ಪ್ರೇರಿತ ರಕ್ತದಾನ ಮಾಡಿ ಮಾತನಾಡಿದರು.
ಬಾಯಿ ಕ್ಯಾನ್ಸರ್ ಅನ್ನು ಮೊದಲ ಹಂತದಲ್ಲಿ ಪತ್ತೆ ಹಚ್ಚಿದಲ್ಲಿ ಶೇ.90 ಗುಣಪಡಿಸಬಹುದು. ನಾಲ್ಕನೇ ಹಂತದಲ್ಲಿ ಕ್ಯಾನ್ಸರ್ ಪತ್ತೆ ಹಚ್ಚಿದಲ್ಲಿ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುವುದಿಲ್ಲ. ಬಾಯಿ ಕ್ಯಾನ್ಸರ್ ಸರ್ಜರಿ, ರೇಡಿಯೇಶನ್, ಕಿಮೋಥೇರಪಿ ಚಿಕಿತ್ಸೆಗಳಿದ್ದು, ಸರ್ಜರಿ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ತಿಳಿಸಿದರು.
15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಂಬಾಕು ಸೇವನೆಯಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವುದು ನೋವಿನ ಸಂಗತಿ. ತಂಬಾಕು ಮೋಜು, ಮಸ್ತಿಗಾಗಿ ಪ್ರಾರಂಭವಾಗಿ ಅದೊಂದು ಚಟವಾಗಿ ಪರಿವರ್ತನೆಯಾಗುತ್ತದೆ. ತಂಬಾಕು ಸೇವನೆಗೆ ಇತ್ತೀಚಿಗೆ ಯುವ ಜನತೆ ಹೆಚ್ಚಾಗಿ ಬಲಿ ಯಾಗುತ್ತಿದ್ದು, ತಂಬಾಕು ಸುಲಭವಾಗಿ ಸಿಗದಂತೆ ಮಾಡಬೇಕು ಎಂದರು.
ಡಿಆರ್ಎಂ ಆಸ್ಪತ್ರೆಯ ನಿರ್ದೇಶಕ ಡಿ.ಟಿ.ಪ್ರಕಾಶ್ ಮಾತನಾಡಿ, ತಂಬಾಕು ರಹಿತ ದಿನಾಚರಣೆಯು ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೇ ಪ್ರತಿ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ತಂಬಾಕು ಸೇವನೆ ಮಾಡುವುದು ಕಂಡುಬಂದಲ್ಲಿ ತಂಬಾಕು ಸೇವನೆ ಮಾಡಿದವರಿಗೆ ಮಾತ್ರವಲ್ಲದೆ ಅವರ ಸಮೀಪವಿರುವರಿಗೂ ಕಾಯಿಲೆ ಬರುವ ಸಾಧ್ಯತೆ ಇರುವುದರಿಂದ ನಮಗೆ ಯಾಕೆ ಎಂದು ಸುಮ್ಮನಿರದೆ ಖಂಡಿಸಬೇಕು ಎಂದು ತಿಳಿಸಿದರು.
ಡಿಆರ್ಎಂ ಆಸ್ಪತ್ರೆ ನಿರ್ದೇಶಕ ಡಾಕ್ಟರ್ ಮಂಜುನಾಥ್, ಡಿ.ಟಿ.ಪ್ರಕಾಶ್, ಘಟಕ ಮುಖ್ಯಸ್ಥ ಚಿದು,
ಜೀವದಾರರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಮುತ್ತಣ್ಣ, ರಶ್ಮಿ, ಜನರಲ್ ಮ್ಯಾನೇಜರ್ ಲೋಕೇಶ್, ಅಕೌಂಟ್ ಮ್ಯಾನೇಜರ್ ಸಂಜಯ್, ಆಸ್ಪತ್ರೆಯ ಸಿಬ್ಬಂದಿಗಳಾದ ಜಬ್ಬಿ, ಲಾವಣ್ಯ, ರೂಪ , ನಂದಿನಿ, ತೆಂಜಿಲ್, ಹಾಗೂ ಸಿಬ್ಬಂದಿ ವರ್ಗದವರು ಇದ್ದರು.